Sunday, September 4, 2016

ಶಿಕ್ಷಕರ ದಿನಾಚರಣೆಯ ಕನ್ನಡ ಭಾಷಣ - Teacher's Day Kannada Speech

ಗುರುರ್ಬ್ರಹ್ಮಾ ಗುರುರ್ವಿಷ್ಣು:
ಗುರುರ್ದೇವೋ ಮಹೇಶ್ವರ: |
ಗುರು ಸಾಕ್ಷಾತ್ಪರಬ್ರಹ್ಮ
ತಸ್ಮೈ ಶ್ರೀಗುರವೇ ನಮ: ||

ಅಜ್ಞಾನ ತಿಮಿರಾಂಧಸ್ಯ
ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀಗುರವೇ ನಮ: ||
ನಮ್ಮ ದೇಶದ ಹೆಮ್ಮೆಯ ತತ್ವಶಾಸ್ತ್ರಜ್ಞ,ರಾಜನೀತಿಜ್ಞ ಮತ್ತು ಪ್ರಥಮ ಉಪರಾಷ್ಟ್ರಪತಿ ಎರಡನೇ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವ ವಿಷಯ ತಮಗೆಲ್ಲಾ ತಿಳಿದಿದೆ . ಶಿಕ್ಷಣ ಕ್ಷೇತ್ರದ ಮಹತ್ವವನ್ನು ಕುರಿತು ಜನರಿಗೆ ಅರಿವು ಮೂಡಿಸಲು  ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ .

"Plants develop by cultivation, Man by education"

ಜೀವನದಲ್ಲಿ ಈಸಬೇಕು, ಇದ್ದು  ಜಯಿಸಬೇಕು ಇದಕ್ಕೆ ಶಿಕ್ಷರ ಮಾರ್ಗದರ್ಶನ ಬೇಕೇಬೇಕು. ಹಾಗಾದರೆ ಶಿಕ್ಷಕ ಎಂದರೆ ಯಾರು? ಹೆಸರೇ ಸೂಚಿಸುವಂತೆ             ಶಿ-ಶಿಸ್ತು            ಕ್ಷ-ಕ್ಷಮೆ               ಕ-ಕರುಣೆ 
 ಅಥವಾ 
 * ಶಿಸ್ತುಗಾರನಾಗಿ ವಿದ್ಯಾರ್ಥಿಗಳ ಜ್ನಾನದಾಹಕ್ಕೆ ತಕ್ಕಂತೆ
  * ಕ್ಷಣ ಕ್ಷಣಕ್ಕು ಉಲ್ಲಾಸ ಬರಿತನಾಗಿ
 * ಕಠಿಣವಾದದ್ದನ್ನು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬಿಡದೇ ಪಠಿಸುವವನೇ ಶಿಕ್ಷಕ.
  *ಮುದ್ದು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಪ್ರಗತಿಯೆಡೆಗೆ ಕೊಂಡೊಯ್ಯಬಲ್ಲ ಏಕೈಕ ನೇತಾರನೆ ಶಿಕ್ಷಕ.

ದೀಪದಲ್ಲಿ ಎಣ್ಣೆ ಇದ್ದಾಗ ಮಾತ್ರ ಅದು ಹೊತ್ತಿಕೊಂಡು ಉರಿಯುತ್ತದೆ. ಆಗ ನೆರಳು ಕಾಣಿಸುತ್ತದೆ. ದೀಪ ಆರಿದಾಗ ನೆರಳು ಇಲ್ಲವಾಗುತ್ತದೆ. ಆಗ ಆ ನೆರಳೆಲ್ಲಿ? ಎಂಬ ಪ್ರಶ್ನೆಗೆ ಹೇಗೆ ಉತ್ತರವಿಲ್ಲವೋ  ಹಾಗೆಯೇ ಶಿಕ್ಷಕರಿಂದ ಪಡೆದ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ. ಹೀಗೆ ಶಿಕ್ಷಕ ಒಳ್ಳೆಯ ಸಮಾಜ ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳನ್ನು ರೂಪಿಸುತ್ತಾನೆ.

ಅದೊಂದು ಕಾಲವಿತ್ತು ರಾಜ ಮಹಾರಾಜರೆಲ್ಲಾ ತಮ್ಮ ಮಕ್ಕಳನ್ನು ವಿದ್ಯೆ ಕಲಿಯಲು ಗುರುವಿನ ಬಳಿ  ಗುರುಕುಲದಲ್ಲಿ ಬಿಟ್ಟು ಬರುತ್ತಿದ್ದರು. ಆ ಶಿಷ್ಯಂದಿರು ತಮ್ಮ ವಿದ್ಯೆ ಪೂರ್ಣವಾಗುವವರೆಗೂ ಗುರುವಿನ ಬಳಿ ಗುರುಕುಲದಲ್ಲಿ ಇರುತ್ತಿದ್ದರು .
ಅಂದಿನ ಕಾಲದ ಗುರು ಶಿಷ್ಯರ ಸಂಬಂಧ ವರ್ಣಿಸಲು ಹೋದರೆ ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ.

ಚಾಣಕ್ಯನ ಶಿಷ್ಯನಾದ ಚಂದ್ರಗುಪ್ತಮೌರ್ಯ ಇಡೀ ಮೌರ್ಯ ಸಾಮ್ರಾಜ್ಯವನ್ನೇ ತನ್ನ ಗುರುವಿನ ಬಳಿ  ಇರಿಸಿದ.ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ಇಡೀ ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ದ್ರೋಣಾಚಾರ್ಯರ ಶಿಷ್ಯನಾದ ಏಕಲವ್ಯ ತನ್ನ ಗುರುವಿನಿಂದ ನಿಂದನೆಗೆ ಒಳಪಟ್ಟರೂ ಎದೆಗುಂದಲಿಲ್ಲ.ಗುರುವಿನ ಮಣ್ಣಿನ ಮೂರ್ತಿಯನ್ನೇ ಮಾಡಿ ಅದೇ ತನ್ನ ಗುರು ದ್ರೋಣಾಚಾರ್ಯರೆಂದು ತಿಳಿದು ಅದರ ಮುಂದೆ ವಿದ್ಯೆ ಕಲಿತು  ಅವನು ಅಂದಿನ ಪ್ರತಿಭಾವಂತ ಬಿಲ್ಲುಗಾರನಾದ.

ಅರಿಸ್ಟಾಟಲ್ ಮತ್ತು ಅಲೆಕ್ಸಾಂಡರ್ ಒಂದು ದಿನ ನದಿ ತೀರದಲ್ಲಿ ಹೋಗುತ್ತಾ ಇರುವಾಗ ಆ ನದಿಯಲ್ಲಿ ಒಬ್ಬ ಮನುಷ್ಯನು ತೇಲಿ ಹೋಗುತ್ತಿರುತ್ತಾನೆ . ಅರಿಸ್ಟಾಟಲ್ ನದಿಗೆ ಹಾರಿ ಅವನನ್ನು ರಕ್ಷಣೆ ಮಾಡಬೇಕು ಅನ್ನುವಷ್ಟರಲ್ಲಿ ಅಲೆಕ್ಸಾಂಡರ್ ನದಿಗೆ ಹಾರಿ ಅವನನ್ನು ರಕ್ಷಣೆ ಮಾಡುತ್ತಾನೆ.ಆಗ ಅರಿಸ್ಟಾಟಲ್ ಕೇಳುತ್ತಾನೆ . ಶಿಷ್ಯ ನೀನೇಕೆ ಹೋದೆ ? ನಿನಗೇನಾದರು ಆದರೆ ನಾನು ನಿನ್ನಂಥ ಶಿಷ್ಯನನ್ನು ಕಳೆದುಕೊಳ್ಳುತ್ತಾ ಇದ್ದೆ ಎಂದರು.  ಆಗ ಅಲೆಕ್ಸಾಂಡರ್ ಹೇಳುತ್ತಾನೆ . ಗುರುಗಳೇ ನೀವು ನನ್ನನ್ನು ಕಳೆದುಕೊಂಡರೆ ನನ್ನಂಥ ನೂರಾರು ಶಿಷ್ಯರನ್ನು ತಯಾರು ಮಾಡಬಹುದು . ಆದರೆ ನಿಮ್ಮನ್ನು ಈ ಲೋಕ  ಕಳೆದುಕೊಂಡರೆ  ಅದೆಷ್ಟೋ ಜನ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿತ್ತು  ಎಂದನು.  ಎಂಥಾ ಗುರು ಶಿಷ್ಯರ ಸಂಬಂಧ ನೋಡಿ.
 ಇಂದಿನ ದಿನ ನಾವು ಇ ರೀತಿಯ ಗುರು ಶಿಷ್ಯರ ಸಂಬಂಧ ಕಾಣಬಹುದಾ? .
   ..............ಖಂಡಿತಾ ಇಲ್ಲಾ .
 ಇಂದಿನ ವಿದ್ಯಾರ್ಥಿಗಳಿಗೆ ಗುರುಗಳ ಮೇಲಿನ ಭಯ ಭಕ್ತಿಗಳೇ ಇಲ್ಲವಾಗಿದೆ.  ನಮ್ಮನ್ನು ಭವಿಷ್ಯದ ಪ್ರಜೆಗಳಾಗಿ ನಿರ್ಮಿಸಿದ ಶಿಕ್ಷಕರಿಗೆ ಯಾವ ಪುರಸ್ಕಾರವು ಸರಿಸಾಟಿಯಾಗಲಾರದು. ಒಂದು ರೀತಿಯಲ್ಲಿ ಅದು ಸಾಟಿಯಲ್ಲದ ಪರಿಶ್ರಮ. ಈ ಮನುಕುಲಕ್ಕೆ ಅತ್ಯಮೂಲ್ಯ ಸೇವೆಸಲ್ಲಿಸುತ್ತಿರುವವರು ಶಿಕ್ಷಕರು. ಜಗತ್ತಿನಲ್ಲಿ ತಾಯಿಯ ಹೊರತಾಗಿ ಎಲ್ಲ ಸಮಸ್ಯೆ ಗಳಿಗೆ  ದಾರಿದೀಪವಾಗಿ ನಿಲ್ಲಬಲ್ಲ ಸ್ರಷ್ಟಿ ಎಂದರೆ ಅದು ಶಿಕ್ಷಕ ಮಾತ್ರ.  ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು.

ನಮ್ಮ ಪ್ರಧಾನ ಮಂತ್ರಿ ಮೋದಿಯವರು ದೆಹಲಿಯಲ್ಲಿ ಭಾಷಣ ಮಾಡುವಾಗ  ತಾಯಿ ಜನ್ಮ ನೀಡಿದರೆ ಶಿಕ್ಷಕ ಜೀವನ ನೀಡುತ್ತಾನೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  ಅಂತೆಯೇ ನಾವು ಕೂಡಾ ನಮಗೆ ವಿದ್ಯೆ ,ಬುದ್ಧಿ ಕೊಟ್ಟ ಗುರುವಿಗೆ ಗೌರವ ಸಲ್ಲಿಸೋಣ. ಗುರುವು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಗುರುವಿನಲ್ಲಿರುವ ಜ್ಞಾನಭಂಡಾರವನ್ನು ನಾವು ತುಂಬಿಸಿಕೊಳ್ಳೋಣ. ಗುರುವನ್ನೇ ಅನುಕರಣೆ ಮಾಡೋಣ.

ಗುರು ವಚನವೇ ಉಪದೇಶ 
ಗುರು ವಚನವೇ ಭಕ್ತಿ 
ಗುರು ವಚನವೇ ಮೋಕ್ಷ ಮಾರ್ಗ 
ಇವು ತಾನು ಪರಮಾರ್ಥ ಕಾಣ ಸರ್ವಜ್ಞ.

ಸರ್ವಜ್ಞ ಹೇಳಿದ ಈ ಒಂದು ನುಡಿಯಲ್ಲಿ ಗುರುವಿನ ಅವಶ್ಯಕತೆ ,ಮಾರ್ಗದರ್ಶನ ,ಉಪದೇಶವನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ ಎಂದು ಹೇಳುತ್ತಾ ನನ್ನ ಚಿಕ್ಕ ಭಾಷಣವನ್ನು ಮುಗಿಸುತ್ತೇನೆ.

3 comments: